Feb 21: ಮಕ್ಕಳಿಗೆ ಪರೀಕ್ಷಾ ಭಯ ಹೊಗಲಾಡಿಸಿ ಕಲಿಕಾ ಚಟುವಟಿಕೆ ಹೆಚ್ಚಿಸಲು ಮುಖ್ಯೋಪಾಧ್ಯಾಯಿನಿಯರ ನೇತೃತ್ವದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಪ್ರಯತ್ನದಲ್ಲಿ ತೊಡಗಿದ್ದಾರೆ. ದಿನಾಂಕ 19/02/2025ರ ಬುಧವಾರದಂದು ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ಫಾದರ್ ವಿನ್ಸೆಂಟ್ ಪೆರೆರಾರವರು ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಮಾರ್ಗದರ್ಶನ ನೀಡಲು ಆಗಮಿಸಿದ್ದರು. ಇವರಿಗೆ ಶ್ರೀಯುತ ವಿಶ್ವನಾಥ ಕುಂಬಾರ ಸರ್ ಇವರು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕವಿತಾರವರು ಹೂಗುಚ್ಛ ಕೊಡುವುದರ ಮೂಲಕ ಸ್ವಾಗತಿಸಿದರು. ಶಾಲೆಯ ಎಲ್ಲಾ ಮಕ್ಕಳು ಹಾಜರಿದ್ದು ಅವರ ಮಾತುಗಳನ್ನು ಗಮನಕೊಟ್ಟು ಆಲಿಸಿದರು.
ಮಕ್ಕಳೇ ನೀವೀಗ ಓಟದ ಸ್ಪರ್ಧೆಯಲ್ಲಿ ಗೆಲುವಿನ ಸಾಲಿಗೆ ಮುಟ್ಟಲು ಸಿದ್ಧರಾಗಿ ನಿಂತಿದ್ದಿರಿ. ಈ ಸಮಯದಲ್ಲಿ ನೀವು ಒಂದು ಕ್ಷಣವನ್ನೂ ಕೂಡ ವ್ಯಯ ಮಾಡದೇ ಪರೀಕ್ಷೆಗೆ ತಯಾರಿ ಮಾಡಬೇಕು. ನಾಳೆ ಓದಿದರಾಯಿತು, ಇನ್ನೂ ಸ್ವಲ್ಪ ಹೊತ್ತು ಟಿವಿ, ಮೊಬೈಲ್ ನೋಡಿದರಾಯಿತು ಎಂದು ಯೋಚಿಸಿದರೆ ಉಳಿದ ಮಹತ್ವದ ದಿನಗಳೂ ಕೂಡ ಅಪ್ರಯೋಜಕವಾಗಿ ಕಳೆದು ಹೋಗುತ್ತವೆ. ಕಾರಣ ನೀವು ಈ ಕ್ಷಣದಿಂದಲೇ ಒಂದು ತಿಂಗಳು ಕಾಲ ಮೊಬೈಲ್ ಮತ್ತು ಟಿವಿಯನ್ನು ತ್ಯಾಗ ಮಾಡುತ್ತೇವೆಂದು ನಿರ್ಧಾರ ಮಾಡಿ. ನೀವು ನಿಮ್ಮ ಶಾಲೆ ಶಿಕ್ಷಕರನ್ನು ತೃಪ್ತಿಗೋಸ್ಕರ ಇಲ್ಲದೇ ಇದ್ದರೂ ನಿಮ್ಮ ತಂದೆ ತಾಯಿ ನಿಮಗೋಸ್ಕರ ಸುರಿಸುವ ಬೆವರಿಗೆ ಗೌರವ ಕೊಡುವುದಕ್ಕಾದರೂ ಓದಿ. ಈ 30 ದಿನಗಳು ನೀವು ಕಷ್ಟ ಪಟ್ಟರೆ ಮುಂದಿನ 30 ವರ್ಷಗಳ ಕಾಲ ಆರಾಮವಾಗಿರಬಹುದು. ಆದರೆ ಈ ದಿನಗಳನ್ನು ಅಪವ್ಯಯ ಮಾಡಿದರೆ, ಮುಂದಿನ ಭವಿಷ್ಯ ಹಾಳಾಗಿ ಹೋಗುತ್ತದೆ. ನೀವೀಗ ಬೆಟ್ಟದ ಅರ್ಧ ದಾರಿಗೆ ಬಂದಂತೆ, ಇಡೀ ಸುಂದರ ಜಗತ್ತು ಸರಿಯಾಗಿ ನೋಡಬೇಕೆಂದರೆ ಬೆಟ್ಟದ ತುದಿಗೆ ಹೋಗಲೆಬೇಕು. ಅದಕ್ಕಾಗಿ ಸತತ ಪ್ರಯತ್ನವಿರಬೇಕು. ಪ್ರಯತ್ನ ನಿರಂತರ ಸಾಗಲು ದಿನನಿತ್ಯ ದೇವರ ಪ್ರಾರ್ಥನೆ, ಒಳ್ಳೆಯ ಊಟ, ಒಳ್ಳೆಯ ನಿದ್ದೆ, ಆರೋಗ್ಯ ಕಾಪಾಡಿಕೊಂಡು ಇರುವುದು ಬಹಳ ಮುಖ್ಯ ಎಂದು ಹೇಳುತ್ತ ಕೊನೆಯಲ್ಲಿ ದೇವರಲ್ಲಿ ಎಲ್ಲರ ಒಳಿತಿಗೋಸ್ಕರ ಪ್ರಾರ್ಥನೆ ಮಾಡಿ ತನ್ನ ಪರಿಣಾಮಕಾರಿ ನುಡಿಗಳಿಗೆ ಪೂರ್ಣವಿರಾಮ ನೀಡಿದರು. ಶ್ರೀಯುತ ದೇವಪ್ಪ ಸರ್ ಅವರು ಅವರ ಮಾತುಗಳನ್ನು ಸ್ಪಷ್ಟೀಕರಿಸುತ್ತ ಅವರಿಗೆ ವಂದನೆಗಳನ್ನು ಸಲ್ಲಿಸಿದರು.
ಶ್ರೀಮತಿ ಅರ್ಚನಾ, ಸಹ ಶಿಕ್ಷಕಿ
ಬೆಥನಿ ಪ್ರೌಡ ಶಾಲೆ, ಚಿತ್ತಾಪೂರ